Wednesday, March 18, 2009

ರಕ್ತದೊತ್ತಡದ ಸಚಿವರನ್ನು ದಯವಿಟ್ಟು ಬಿಟ್ಟು ಬಿಡಿ !

ಬಹಳ ತಮಾಷೆ ಎನಿಸುತ್ತದೆ. ನಮ್ಮ ಸರಕಾರಗಳನ್ನು ನಡೆಸುವ ಮಂದಿ ಇಷ್ಟೊಂದು ತಾಳ್ಮೆ ಕಳೆದುಕೊಂಡರೆ ಹೇಗೆ (ಟೆನ್ಶನ್) ಎಂದು ಅರ್ಥವಾಗುವುದಿಲ್ಲ. ಪ್ರಜೆಗಳೆಲ್ಲಾ ತಾಳ್ಮೆ ಕೆಡಿಸಿಕೊಂಡರೆ ಅವರಿಗೆ ಸಹನೆಯ ಪಾಠ ಹೇಳಬೇಕಾದ ಮಂದಿ ಇವರು. ಆದರೆ ಅವರೇ ಬೊಬ್ಬೆ ಹಾಕುತ್ತಾರೆ, ತೀರಾ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಊರ ಮಂದಿಯ ಎದುರು ತೀರಾ ತುಚ್ಛವೆನ್ನಿಸಿಬಿಡುತ್ತಾರೆ. 
ಇತ್ತೀಚೆಗಷ್ಟೇ ರಾಷ್ಟ್ರೀಯ ಕಲಾಗಾರದ ಉದ್ಘಾಟನೆ ಸಮಾರಂಭದಲ್ಲಿ ಸಚಿವ ರಾಮಚಂದ್ರಗೌಡರು ನಡೆದುಕೊಂಡ ರೀತಿಯನ್ನು ಉಲ್ಲೇಖಿಸುವುದಾದರೆ ನಿಜಕ್ಕೂ ಬೇಸರ ಎನಿಸುತ್ತದೆ. ಬಹಳಷ್ಟು ಬಾರಿ ಅಪ್ರಬುದ್ಧತೆಯನ್ನು, ಅಜ್ಞಾನವನ್ನು ಕ್ಷಮಿಸಿಬಿಡಬಹುದು. ಆದರೆ ಅಹಂಕಾರದ ಉದ್ಧಟತನವನ್ನು ಸಹಿಸಬಾರದು. ಅಂದಿನ ಸಚಿವರ ವರ್ತನೆ ನಿಜವಾಗಲೂ ಉದ್ಧಟತನವೇ. 

ಕಲಾವಿದರೆಂದಾಗಲೀ, ಅವರ ಸ್ಥಾನಮಾನದಿಂದಾಗಲೀ ಈ ಘಟನೆಯನ್ನು ಖಂಡಿಸುತ್ತಿಲ್ಲ. ಪ್ರಜಾತಂತ್ರದಲ್ಲಿ  ಯಾವುದೇ ಒಬ್ಬ ನಾಗರಿಕನಿಗೆ ತೋರುವಂಥ ಗೌರವವೇ ಅದಲ್ಲ. ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಎದ್ದು ನಿಂತು ಏನೋ ಹೇಳಲು ಪ್ರಯತ್ನಿಸಿದ ನಾಗರಿಕನನ್ನು (ಕಲಾವಿದ ಎಂಬುದನ್ನು ನಂತರ ವ್ಯಾಖ್ಯಾನಿಸೋಣ) ಸಮಾಧಾನಗೊಳಿಸುವ ಪರಿಯೇ ಅದು ಎಂಬುದು ನನ್ನ ಪ್ರಶ್ನೆ.

‘ಗೆಟ್‌ಔಟ್, ಸರಕಾರ ಇಲ್ಲಿ ಮಾತನಾಡುತ್ತಿದೆ’ ಎಂದರೆ ಏನು ಅರ್ಥ ? ಸರಕಾರದ ಮುಖವಾಡ ಹಾಕಿಕೊಂಡು ಇಂಥ ಸಚಿವರು ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಯಾರು ಏಕೆ ಸಹಿಸಬೇಕೆಂಬುದು ಅರ್ಥವಾಗದ ಸಂಗತಿ. ರಾಮಚಂದ್ರಗೌಡರ ಇಂಥ ಒತ್ತಡದ ವರ್ತನೆ ಇದೇನೋ ಹೊಸತಲ್ಲ. ಎರಡೂವರೆ ವರ್ಷದ ಹಿಂದೆ ಡೇವಿಡ್ ಸಿಮೆಯೋನ್ ವಿಧಾನಪರಿಷತ್‌ನಲ್ಲಿ ಸಭಾಪತಿಗಳಾಗಿದ್ದರು. ಬೆಳಗ್ಗೆಯಿಂದ ಮಾತನಾಡಲು ಅವಕಾಶ ಕೇಳಿ ಕೇಳಿ ಗೌಡರಿಗೆ ಸಾಕಾಗಿ ಹೋಗಿತ್ತು. ಸುದರ್ಶನ್ ಅವರು ಇನ್ನೂ ಅವಕಾಶ ಕೊಟ್ಟಿರಲಿಲ್ಲ. ಕಲಾಪದ ಮಧ್ಯೆ ಇದ್ದಕ್ಕಿದ್ದಂತೆ ಸಿಡಿದೆದ್ದ ಗೌಡರು, ‘ನನ್ನ ಅವಕಾಶವನ್ನು ಹತ್ತಿಕ್ಕುತ್ತಿದ್ದೀರಿ. ಇದು ಸರಿಯಲ್ಲ. ಇದು ತಾರತಮ್ಯ ವರ್ತನೆ’ ಎಂದು ಉಪ ಸಭಾಪತಿ ವಿರುದ್ಧ ಪ್ರತಿಭಟಿಸಿ ಸಭಾಪತಿಗಳಿಗೆ ದೂರು ನೀಡುವುದಾಗಿ ಬಿರಬಿರನೆ ಹೊರನಡೆದರು. ಕೊನೆಗೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆಯವರೆಲ್ಲಾ ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇದೂ ಸಹ ಸದಸ್ಯರಾಗಿ ಹೀಗೆ ನಡೆದುಕೊಂಡಿದ್ದು ಬಹುಶಃ ಇವರೊಬ್ಬರೇ. ಆ ಸಂದರ್ಭದಲ್ಲಿ ಎಲ್ಲರ ಆತಂಕವಿದ್ದದ್ದು ಅವರ ರಕ್ತದೊತ್ತಡದ ಬಗ್ಗೆ. 

ಇನ್ನು ಕಲಾವಿದರ ವಿಷಯ. ಒಂದಂತೂ ನಿಜ. ಯಡಿಯೂರಪ್ಪ ಸರಕಾರ ಕನ್ನಡ ಮತ್ತು ಸಂಸ್ಕೃತಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಳಿದಷ್ಟು ಹಣ ಕೊಟ್ಟಿದ್ದಾರೆ. ಆದರೆ ಅದರ ನಿರ್ವಹಣೆಗೆ ಮಾತ್ರ ದಿಕ್ಕು-ದೆಸೆಯೇ ಇಲ್ಲ. ಸಂಸ್ಕೃತಿ ಇಲಾಖೆ ನಿರ್ವಹಣೆ ಅಧೋಗತಿಗೆ ಇಳಿದಿದೆ. ಸರಕಾರ ಕೊಟ್ಟ ಹಣವನ್ನು ವೆಚ್ಚ ಮಾಡಲೂ ಪುರುಸೊತ್ತಿಲ್ಲ. ಆ ಇಲಾಖೆಯ ನಿರ್ವಹಣೆಯ ಹೊಣೆಯೂ ಅಷ್ಟೇ. ‘ಯಾರು ಖಾಲಿಯಿದ್ದಾರೋ ಅವರು ಆ ಇಲಾಖೆಯ ಕಷ್ಟ ಸುಖ ಕೇಳುವ ಸ್ಥಿತಿ’. ವಾಸ್ತವವಾಗಿ ಮೊದಲ ಬಾರಿಗೆ ಸರಕಾರ ಬಂದು, ಸಚಿವರಾಗಿರುವಾಗ ಯಾರು ತಾನೇ ಖಾಲಿಯಿದ್ದಾರೆ, ಹೇಳಿ ನೋಡೋಣ !

ಹಣ ಕೊಟ್ಟಿದೆ ಎಂಬುದನ್ನು ಬಿಟ್ಟರೆ ಸಂಸ್ಕೃತಿ-ಸಾಹಿತ್ಯದ ಬೆಳವಣಿಗೆಯತ್ತ ಗಮನವನ್ನೇ ಹರಿಸಿಲ್ಲ. ಈ ರೀತಿ ಅನಾಥವಾಗಿರುವುದು ಬಹುಶಃ ಇದೇ ಮೊದಲು. ಈ ಹಿಂದೆಲ್ಲಾ ಇಂಥ ಉದಾಹರಣೆಗಳೇ ಕಡಿಮೆ. ಸಾಹಿತ್ಯ-ಸಂಸ್ಕೃತಿಯ ಗಂಧಗಾಳಿ ಗೊತ್ತಿಲ್ಲದವರೂ ಇಷ್ಟೊಂದು ನಿಷ್ಕಾಳಜಿ ವಹಿಸಿಲ್ಲ. ಜತೆಗೆ ಕಲಾವಿದರೊಂದಿಗೆ ಹೀಗೆ ಅನುಚಿತವಾಗಿ ವರ್ತಿಸುವರಂಥ ಸಚಿವರನ್ನು ಮಂತ್ರಿಮಂಡಳದಲ್ಲಿ ಇಟ್ಟುಕೊಂಡಿಲ್ಲ. 

ಎಸ್. ರಮೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗಿನ ಸಂದರ್ಭ. ಧಾರವಾಡಕ್ಕೆ ಹೋದ ಸಚಿವರು ಅತ್ಯಂತ ಉತ್ಸಾಹದಿಂದಲೇ ಇಲಾಖೆ ಅಧಿಕಾರಿಗಳನ್ನು ಕರೆದು, ‘ದ. ರಾ. ಬೇಂದ್ರೆಯವರನ್ನು ಕಂಡು ಹೂಗುಚ್ಛ ಕೊಟ್ಟು ಬರೋಣ’ ಎಂದರಂತೆ. ತಕ್ಷಣವೇ ಅಧಿಕಾರಿಗಳು ಅವಗಢವನ್ನು ನಿರೀಕ್ಷಿಸಿ, ‘ಇಲ್ಲ ಸಾರ್, ಅವರು ಬದುಕಿಲ್ಲ’ ಎಂದರಂತೆ. ಅದಕ್ಕೆ ಸಚಿವರು ಉತ್ಸಾಹ ಕಡಿಮೆಯಾಗಲಿಲ್ಲ. ‘ಹೌದೇ, ಪಾಪ. ಒಂದು ಕೆಲಸ ಮಾಡಿ. ಅವರ ಶ್ರೀಮತಿಗೆ ಹೂಗುಚ್ಛ ಕೊಡೋಣ’ ಎಂದು ಸೂಚಿಸಿದರಂತೆ. ‘ಇಲ್ಲ ಸಾರ್, ಅವರು ಬೇಂದ್ರೆಯವರಿಗಿಂತ ಮೊದಲೇ ಹೋದರು’ ಎಂದಾಗ ‘ಹೌದೇ, ಇರಲಿ ಬಿಡಿ’ ಎಂದು ಸುಮ್ಮನಾದರಂತೆ. ಇದು ಅಜ್ಞಾನದ ಸ್ಥಿತಿ.

ನಮ್ಮ ನಾಡಿನ ಇತಿಹಾಸದಲ್ಲಿ ಯಾವ ಸರಕಾರವೂ, ಸಚಿವರೂ ಸಾಂಸ್ಕತಿಕ ವಲಯದವರೊಂದಿಗೆ ಹೀಗೆ ವರ್ತಿಸಿಲ್ಲ. ಅತ್ಯಂತ ಕಾಳಜಿಯಿಂದ ವರ್ತಿಸಿದ್ದರ ಪರಿಣಾಮವೇ ಬೇರೆ ರಾಜ್ಯಗಳಲ್ಲಿ ಇರಲಾರದಷ್ಟು ಪ್ರಶಸ್ತಿ, ಅಕಾಡೆಮಿಗಳಿವೆ. ದೇವರಾಜು ಅರಸು ಅವರು ಸದಾ ಸಾಹಿತಿಗಳು-ಕಲಾವಿದರೊಂದಿಗೆ ಬೆರೆತಿದ್ದವರೇ. ಗುಂಡೂರಾವ್ ಅವರು ಕಲಾವಿದರನ್ನು ನಡೆಸಿಕೊಳ್ಳುತ್ತಿದ್ದ ಪರಿಯೇ ಭಿನ್ನ. ಪ್ರತಿ ಬಾರಿಯೂ ಮಾಸಾಶನದ ಏರಿಕೆಗೆ ತಡೆ ಹಾಕುತ್ತಿದ್ದ ಐಎಎಸ್ ಬಾಬೂಗಳನ್ನು ತರಾಟೆಗೆ ತೆಗೆದುಕೊಂಡು, ‘ನಿಮ್ಮ ಟಿಎ, ಡಿಎ ಯಷ್ಟೂ ಅವರಿಗೆ ಮಾಸಾಶನ ಸಿಗೋದಿಲ್ಲ. ಯಾಕ್ ತಡೆ ಮಾಡ್ತೀರಾ?’ ಎಂದು ಪ್ರಶ್ನಿಸುತ್ತಿದ್ದರು. 

ಇನ್ನು ರಾಮಕೃಷ್ಣ ಹೆಗಡೆಯವರ ಕಾಲದ ಘಟನೆ ಕೇಳಿ. ಉರ್ದು-ಕನ್ನಡ ಕವಿ ಹಮೀದ್ ಅಲ್ಮಸ್ ಆಗ ಉರ್ದು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕಾರ್ಮಿಕ ಇಲಾಖೆಯ ನೌಕರ. ಒಮ್ಮೆ ಕೆ.ಆರ್. ಸರ್ಕಲ್ ನಲ್ಲಿ ನಡೆದುಹೋಗುತ್ತಿದ್ದರಂತೆ. ಅದೇ ಹಾದಿಯಲ್ಲಿ ಹೋಗುತ್ತಿದ್ದ ರಾಮಕೃಷ್ಣ ಹೆಗಡೆ ಕಾರು ಪಕ್ಕದಲ್ಲಿ ನಿಂತಿತು. ಅದರಿಂದಿಳಿದು ಬಂದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ‘ಏನು ಅಲ್ಮಸ್ ಅವರೇ ಹೇಗಿದ್ದೀರಿ. ಏನಾದರೂ ತೊಂದರೆಯಿದೆಯಾ, ಸಮಸ್ಯೆಯಿದೆಯಾ? ’ಎಂದು ಕೇಳಿದರಂತೆ. ಆಗ ಅಲ್ಮಸ್ ಅವರು, ‘ನನಗೇನೂ ಇಲ್ಲ. ನನ್ನ ಮನೆ ಮುಂದೆ ಇರುವ ಸಾರ್ವಜನಿಕ ನಲ್ಲಿ (ನಳ) ಕೆಟ್ಟು ಹೋಗಿ ಬಹಳಷ್ಟು ತಿಂಗಳಾಗಿವೆ. ಜನ ಬಹಳ ಕಷ್ಟ ಪಡುತ್ತಿದ್ದಾರೆ’ ಎಂದರಂತೆ. ತಕ್ಷಣವೇ ಹೆಗಡೆಯವರು, ತಮ್ಮ ಆಪ್ತ ಸಹಾಯಕರಿಗೆ ಸೂಚಿಸಿದರಂತೆ. ಒಂದು ದಿನದೊಳಗೆ ಅದು ಸರಿಯಾಯಿತಂತೆ. 

ಒಂದು ಸಂದರ್ಭವನ್ನು ನಿಭಾಯಿಸಲು ಅನುಭವ ಬೇಕು. ಅನುಭವವಿಲ್ಲದವರು ಅದನ್ನು ಸಾಧಿಸಲು ಶ್ರಮಪಡಬೇಕು. ಅದುಬಿಟ್ಟು ತಮ್ಮ ಅನನುಭವವನ್ನೇ ಸಮರ್ಥಿಸಿಕೊಳ್ಳಲು ಹೊರಟರೆ ನಗೆಪಾಟಲೀಗೀಡಾಗುತ್ತಾರೆ. ಈಗ ರಾಮಚಂದ್ರಗೌಡರು ಆಗಿರುವುದು ಇದೇ. 

ದೇವೇಗೌಡರು ರಾಮಚಂದ್ರಗೌಡರಷ್ಟು ಡಾಕ್ಟರೇಟ್ ಪಡೆದವರಲ್ಲ. ಆದರೆ ಅವರ ಸಂದರ್ಭ ನಿಭಾಯಿಸುವಿಕೆಯ ಜಾಣ್ಮೆ ಬಂದದ್ದು ಅನುಭವವದಿಂದಲೇ. ಅವರು ಮುಖ್ಯಮಂತ್ರಿಯಾಗಿದ್ದಾಗಿನ ಸಂದರ್ಭ. ರವೀಂದ್ರ ಕಲಾಕ್ಷೇತ್ರದಲ್ಲಿ  ವಿವಿಧ ರಾಜ್ಯ ಪ್ರಶಸ್ತಿಗಳ ಪ್ರದಾನ ಕಾರ್‍ಯಕ್ರಮ. ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸಭೆಯಲ್ಲಿದ್ದ ಒಂದೆರಡು ಮಂದಿ ಸುಮ್ಮನೆ ಬೊಬ್ಬೆ ಹಾಕತೊಡಗಿದರು. ತಕ್ಷಣವೇ ದೇವೇಗೌಡರು ಅವರನ್ನು ಉದ್ದೇಶಿಸಿ ಶಾಂತಚಿತ್ತದಿಂದಲೇ, ‘ನೀವ್ಯಾರು ಅಂತ ನನಗೆ ಗೊತ್ತಿದೆ. ಸುಮ್ನೆ ಕೂತ್ಕೊಳ್ಳಿ. ಕಾರ್‍ಯಕ್ರಮ ಮುಗಿದ ಮೇಲೆ ನಿಮಗೆ ಸಿಗ್ತೀನಿ. ಆಗ ನಿಮ್ದೆಲ್ಲಾ ಹೇಳಿಕೊಳ್ಳಿ. ಈಗ ಕೂತ್ಕೊಳ್ಳಿ’ ಎಂದು ಮೂರು ಸಾರಿ ಹೇಳಿ ಕುಳ್ಳಿರಿಸಿಯೇ ಬಿಟ್ಟರು. ಆ ಕ್ಷಣದಲ್ಲಿ ಒಬ್ಬ ಪೊಲೀಸರನ್ನು ಕರೆದು, ‘ಅವನನ್ನು ಅರೆಸ್ಟ್ ಮಾಡಿ ಒಳಗೆ ಹಾಕಿ’ ಎಂದಿದ್ದರೆ ಏನೂ ಆಗುತ್ತಿರಲಿಲ್ಲ. ಒಂದು ಕ್ಷಣದಲ್ಲಿ ಆ ಕೆಲಸವಾಗುತ್ತಿತ್ತು. ಆದರೆ ಅವನನ್ನು ಸಮಾಧಾನಗೊಳಿಸಲು ತೆಗೆದುಕೊಂಡ ಕ್ಷಣ ನಾಲ್ಕಾರು ಇರಬಹುದು. ಅವರ ಆ ಜಾಣ್ಮೆ ಹತ್ತಿಕ್ಕುವ ಪ್ರವೃತ್ತಿಯನ್ನು ಸಾಯಿಸಿತು. 

ಆ ಸಾಧ್ಯತೆ ಇಲ್ಲೂ ಇತ್ತು. ಅದನ್ನು ರಾಮಚಂದ್ರಗೌಡರು ಕೈಗೊಳ್ಳಲಿಲ್ಲ. ಸುಮ್ಮನೆ ಕಲಾವಿದರ ವಿರುದ್ಧ ಹರಿಹಾಯ್ದು ಜನರ ಬಾಯಿಗೆ ಆಹಾರವಾದರು. ಪ್ರತಿ ಕಾರ್ಯಕ್ರಮಕ್ಕೂ ಒಂದು ಸಂದರ್ಭ, ಔಚಿತ್ಯ ಎಂಬುದು ಇರುತ್ತದೆ. ಅದನ್ನು ನಮ್ಮ ಸಚಿವರಗಳು ಅರ್ಥಮಾಡಿಕೊಳ್ಳಬೇಕು. ಒಂದುವೇಳೆ ಎಂ.ಎಫ್. ಹುಸೇನ್ ಮೇಲೆ ಸಿಟ್ಟಿದ್ದರೆ, ಅದನ್ನು ತೀರಿಸಿಕೊಳ್ಳಲು ಇದು ವೇದಿಕೆಯಲ್ಲ. ಕಲಾಕೃತಿ ರಚಿಸಿದ ಕೂಡಲೇ ಕಲಾವಿದರಾಗಲಾರರು ; ತಮ್ಮೊಳಗಿನ ಸೂಕ್ಷ್ಮ ಸಂವೇದನೆ, ಒಳ ಮನಸ್ಸುಗಳನ್ನು ಸದಾ ಜಾಗೃತದಲ್ಲಿಟ್ಟುಕೊಳ್ಳುವವನು ಕಲಾವಿದ. ಹಾಗಾಗಿ ರಾಮಚಂದ್ರಗೌಡರು ಕಲಾಕೃತಿ ರಚಿಸಿ ಬಹುಮಾನ ಪಡೆದಿರಬಹುದು, ಆದರಿನ್ನೂ ಕಲಾವಿದರಾಗಿಲ್ಲ. 

ಒಬ್ಬ ಸಚಿವನಿಗೂ, ನಾಗರಿಕನಿಗೂ ವ್ಯತ್ಯಾಸಗಳಿರುತ್ತವೆ. ಸಚಿವನ ವರ್ತನೆ ಎಲ್ಲರಿಗೂ ಮಾದರಿಯಾಗಬೇಕು. ಮುಖ್ಯಮಂತ್ರಿಗಳು ತಮ್ಮ ಸಚಿವರಿಗೆ ಇಂಥದೊಂದು ಪಾಠ ಕಲಿಸುವುದು ಸೂಕ್ತ. ಕಲಿಯದವರನ್ನು ಮಂತ್ರಿಮಂಡಳದಿಂದ ಕೈ ಬಿಡುವುದು ಒಳಿತು.  ಇಲ್ಲದಿದ್ದರೆ ಅವರ ಎಲ್ಲ ಶ್ರಮವೂ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತೆಯೇ.
[ ... ]