ಇಂಥ ಹೊತ್ತಿನಲ್ಲಿ ಸರಕಾರ ಮಾಡಬೇಕಾದದ್ದು ಏನು ?
ಸರಕಾರವೆಂಬುದು ತನ್ನ ಅಸ್ತಿತ್ವವನ್ನು ಪ್ರದರ್ಶಿಸಲು ಇದು ಸಕಾಲ.
ಎಷ್ಟೋ ಬಾರಿ ಜನರಿಗೆ ಸರಕಾರದ ಅಸ್ತಿತ್ವ ಅರಿವಾಗುವುದು ಜನ ವಿರೋಧಿ ನಿರ್ಧಾರಗಳನ್ನು ಕೈಗೊಂಡಾಗಲೇ. ಚುನಾವಣೆಯ ಹೊತ್ತಿನಲ್ಲಿ ಕೊಡುವ ಪುಕ್ಕಟೆ ಭರವಸೆ ಎಂದಿಗೂ ಯಾವ ಸರಕಾರವನ್ನೂ ಜನರ ಮನಸ್ಸಿನಲ್ಲಿ ಉಳಿಸದು. ಆದರೆ ಅಂಥದೊಂದು ಭ್ರಮೆ ನಮ್ಮೆಲ್ಲರಲ್ಲೂ ಇದ್ದೇ ಇದೆ. ಆದರೆ, ಈ ಹೊತ್ತು ಮಾತ್ರ ಬಹಳ ದುಬಾರಿಯದ್ದು. ಅಂಥ ಕಠಿಣ ಹೊತ್ತು ಈಗಿನದು.
ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ನೆರೆ ಬಂದು ಬದುಕನ್ನೆಲ್ಲ ಅಳಿಸಿ ಹಾಕಿದೆ. ಮಳೆ ಎಂದರೆ ಹಗಲುಗನಸು ಎಂದುಕೊಳ್ಳುತ್ತಿದ್ದವರಿಗೆ ಅದೊಂದು ಭಯಂಕರ ಎನ್ನುವಂತೆ ಅರಿವಿಗೆ ಬಂದದ್ದು ವಿಪರ್ಯಾಸ. ಇನ್ನೆಂದೂ ಮಳೆಯನ್ನೇ ನೆನಪಿಸಿಕೊಳ್ಳದಂಥ ಅನುಭವ ಈ ಬಾರಿಯದ್ದು. ಇದೆಲ್ಲದರ ಮಧ್ಯೆ ನೆಲೆ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ನೀಡುವತ್ತ, ಮತ್ತೆ ಬದುಕು ಕಟ್ಟಿಕೊಳ್ಳುವವರಿಗೆ ಸಹಾಯ ಹಸ್ತ ನೀಡುವತ್ತ, ಬದುಕಿಗೆ ಬೇಕಾದ ಸೌಲಭ್ಯಗಳ ಮರು ನಿರ್ಮಾಣದತ್ತ ಆಲೋಚನೆಗಳು ನಡೆದಿವೆ. ಸಾರ್ವಜನಿಕರು ಎಂದಿನಂತೆ ತಮ್ಮ ನೆರವಿನ ಮಹಾಪೂರವನ್ನು ಹರಿಸತೊಡಗಿದ್ದಾರೆ.
ಇದರ ಮಧ್ಯೆಯೇ ಕೊಂಚ ರಾಜಕಾರಣವೂ ಗರಿಗೆದರಿದೆ. ಆಡಳಿತ ಪಕ್ಷ, ಪ್ರತಿಪಕ್ಷ, ರಾಜ್ಯ ಸರಕಾರ, ಕೇಂದ್ರ ಸರಕಾರ ಎಂಬುದೆಲ್ಲವೂ ರಂಗಕ್ಕೆ ಬಂದಿವೆ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಬೆಂಗಳೂರಿಗೆ ಬಂದು ಹೆಚ್ಚಿನ ನೆರವಿಗೆ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದಾಗಿ ಪ್ರಕಟಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಗೃಹ ಸಚಿವ ಪಿ. ಚಿದಂಬರಂ ಅವರೆಲ್ಲಾ ಕಣ್ಣು ಹಾಯಿಸಿ ಹೊರಟರು.
ಅಂದು ಪ್ರವಾಹದ ಸ್ಥಿತಿ ಎದುರಾದಾಗ ನಮ್ಮ ಸಚಿವರೆಲ್ಲಾ ಮೋದಿ-ಜೈಟ್ಲಿ ಪಾಠ ಕೇಳುತ್ತಿದ್ದರು. ಆಡಳಿತದ ಪಾಠ ಕೇಳಿದ ಮಂದಿಗೆ ತುರ್ತಾಗಿ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಆ ದಿನ ರಾತ್ರಿ ಮೈಸೂರಿನಲ್ಲಿ ದಸರಾ ಸಂತೋಷಕೂಟದಲ್ಲಿ ತೊಡಗಿತ್ತು ಸರಕಾರ. ವಿಚಿತ್ರವೆಂದರೆ ಅದ್ಯಾವುದೂ ಅನಿವಾರ್ಯವಾಗಿದ್ದಲ್ಲ.
ಈಗ ಅವರೆಲ್ಲಾ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ವಾಸ್ತವವಾಗಿ ನಮಗೆ, ನಮ್ಮ ಸರಕಾರಗಳಿಗೆ, ಅಧಿಕಾರಿಗಳಿಗೆ, ಆಳುವವರಿಗೆ ಪ್ರಕೃತಿ ವಿಕೋಪ ನಿರ್ವಹಣೆಯೇ ತಿಳಿದಿಲ್ಲ. ಅದೊಂದು ಪರಿಹಾರ ಕೊಟ್ಟು ಮುಗಿಸುವ ಕೆಲಸವೆಂದೇ ತಿಳಿದುಕೊಂಡಿದ್ದೇವೆ. ಒಂದಷ್ಟು ಗಂಜಿ ಕೇಂದ್ರ ತೆರೆದು, ಒಂದಷ್ಟು ಪರಿಹಾರ ವಿತರಿಸಿದರೆ ವಿಕೋಪ ನಿರ್ವಹಣೆ ಮುಗಿಯಿತು. ಹಾಗೆಯೇ ನಮ್ಮ ಅಧಿಕಾರಿಗಳಿಗೂ ಆ ಗಂಭೀರತೆಯೂ ಇಲ್ಲ.
ಮೊನ್ನೆ ನಾಡು ಮುಳುಗುತ್ತಿದ್ದಾಗ ಸರಕಾರ ಪರಿಸ್ಥಿತಿ ನಿರ್ವಹಣೆಗೆಂದು ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿತು. ಜನರಿಗೂ ಅನುಕೂಲವಾಗಲೆಂದು ಆ ಅಧಿಕಾರಿಯ ದೂರವಾಣಿ ಸಂಖ್ಯೆ, ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಯನ್ನೆಲ್ಲಾ ಪ್ರಚಾರ ಮಾಡಿತು. ಟಿವಿ ವಾಹಿನಿಯೊಂದು ಪ್ರವಾಹ ಪರಿಸ್ಥಿತಿ ಕುರಿತು ಸುದ್ದಿಯನ್ನು ಪ್ರಸಾರ ಮಾಡುವಾಗ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಮಾಡಿದರೆ ಆ ಅಧಿಕಾರಿ, ‘ಹೌದೇ, ನನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದಾರೆಯೇ?’ ಎಂದು ಕೇಳಿದರು (ನೇರ ಪ್ರಸಾರದಲ್ಲಿ). ಜತೆಗೆ ಸ್ಥಿರ ದೂರವಾಣಿಯನ್ನು ಯಾರೂ ಸ್ವೀಕರಿಸುತ್ತಿಲ್ಲ ಎಂದು ಕೇಳಿದರೆ , ‘ಇಂದು ಭಾನುವಾರ. ಲ್ಯಾಂಡ್ಲೈನ್ ತೆಗೆದುಕೊಳ್ಳುವವರಿಲ್ಲ’ ಎಂದು ಉತ್ತರಿಸಿದರು ಆ ಅಧಿಕಾರಿ. ಅಲ್ಲಿಗೆ ಲೆಕ್ಕ ಹಾಕಿಕೊಳ್ಳಿ, ಪ್ರವಾಹಕ್ಕೆ ಭಾನುವಾರ, ಸೋಮವಾರ ಎಂಬುದಿದೆಯೇ?
ಎಲ್ಲವೂ ಸರಿ. ಇಂಥ ಪರಿಸ್ಥಿತಿಯ ಮಧ್ಯೆಯೇ ರಾಜ್ಯ ಸರಕಾರ ಪ್ರಕೃತಿ ವಿಕೋಪ ನಿರ್ವಹಣೆಗೆಂದು ಸಾರ್ವಜನಿಕರ ಸಹಕಾರ ಕೋರಿದೆ. ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲೂ ನೆರವು ಸ್ವೀಕಾರ ಘಟಕ ತೆರೆದಿದೆ. ನಿತ್ಯವೂ ನೆರವು ಕೋರಿ ಮುಖ್ಯಮಂತ್ರಿಗಳು ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಎಲ್ಲೆಲ್ಲೂ ಸಂಘ ಸಂಸ್ಥೆಗಳು ನೆರವು ಸಂಗ್ರಹದತ್ತ ಮುಖಮಾಡಿವೆ. ಇಡೀ ಸರಕಾರವೇ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಕುಳಿತಿದೆ. ಇದೆಲ್ಲದರ ಮಧ್ಯೆ ನೆರವು ನೀಡುವ ಸಾರ್ವಜನಿಕರಿಗೆ ಸರಕಾರದ ಮೇಲೆ, ಆಳುವವರ ಮೇಲೆ ನಂಬಿಕೆ ಕಡಿಮೆಯೇ. ಈ ಹಣ ದುರುಪಯೋಗವಾಗದಿರಲೆಂಬ ಸದಾಶಯದಿಂದಲೇ ನೀಡುತ್ತಾರೆ. ಕಾರಣ, ಸರಕಾರ, ನಮ್ಮನ್ನಾಳುವ ಮಂದಿ ಅಂಥದೊಂದು ವಿಶ್ವಾಸ ಉಳಿಸಿಕೊಂಡಿಲ್ಲ.
ಹಾಗಾದರೆ ಇಂಥ ಕಠಿಣ ಪರಿಸ್ಥಿತಿಯಲ್ಲಿ ಸರಕಾರವೇ ನಿಂತು ಎಲ್ಲವನ್ನೂ ಮಾಡಬೇಕೇ? ಅಂಥದೊಂದು ಅಗತ್ಯವಿದೆಯೇ? ಎಂಬ ಪ್ರಶ್ನೆ ಹಾಕಿಕೊಂಡರೆ ಖಂಡಿತಾ ಇಲ್ಲ. ಸರಕಾರಗಳು ಸಾರ್ವಜನಿಕರ, ಸಮುದಾಯದ ಸಹಭಾಗಿತ್ವವನ್ನು ಪಡೆದರೆ ಸಮರ್ಥವಾಗಿ ನಿಭಾಯಿಸಬಹುದು. ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ನಿಟ್ಟಿನಲ್ಲಿ ಆಲೋಚಿಸಬಹುದು.
ಮೊದಲನೆಯದಾಗಿ, ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ನೋಡಲ್ ಏಜೆನ್ಸಿಗಳೇ ಇಲ್ಲ. ಈಗ ಎಲ್ಲ ಕಡೆಯಿಂದಲೂ ನೆರವು ಹರಿದು ಬರುತ್ತಿದೆ (ಆಹಾರ, ಧಾನ್ಯ, ಹಣ, ಪಾತ್ರೆ, ಬಟ್ಟೆ ಇತ್ಯಾದಿ). ಅವುಗಳನ್ನು ಸಮರ್ಪಕವಾಗಿ ಮುಟ್ಟಿಸುವ ವ್ಯವಸ್ಥೆಯಿಲ್ಲ. 2004 ರಲ್ಲಿ ಸುನಾಮಿ ದುರಂತ ಬಂದಾಗಲೂ ಇಂಥದೇ ಪರಿಸ್ಥಿತಿ. ಸಂತ್ರಸ್ತರ ಅಗತ್ಯಗಳು ತಿಳಿಯದೇ ಎಲ್ಲರೂ ಕೊಂಡೊಯ್ದು ಅಲ್ಲಿ ಸುರಿದು ಬಂದರು. ಎಷ್ಟೋ ಬಟ್ಟೆಗಳು, ಆಹಾರ ಸಾಮಗ್ರಿಗಳು ವ್ಯರ್ಥವಾದವು. ಎಲ್ಲರಿಗೂ ನೆರವು ಸಿಗಲಿಲ್ಲ. ಒಂದಷ್ಟು ಮಂದಿಗೇ ಎಲ್ಲವೂ ಸಿಕ್ಕಿತು. ಸಾಲಿನ ಕೊನೆಯಲ್ಲಿದ್ದವನಿಗೆ ಮುಟ್ಟುವಾಗ ಎಲ್ಲರ ಕೈಗಳೂ ಸೋತಿದ್ದವು. ಈ ಬಾರಿಯೂ ಹಾಗೆಯೇ ಆಗುತ್ತಿದೆ.
ಸಂತ್ರಸ್ತರ ಅಗತ್ಯಗಳು ದಿನೇದಿನೇ ಬದಲಾಗುತ್ತವೆ. ಮೊದಲಿಗೆ ಹಸಿವು ನೀಗಿಸಿಕೊಳ್ಳುವುದಿದ್ದರೂ ನಂತರ ಬಟ್ಟೆ, ಮನೆ-ಹೀಗೆ ಇತರೆ ಅಗತ್ಯಗಳು ಮುಖ್ಯವಾಗುತ್ತಾ ಹೋಗುತ್ತವೆ. ಹಾಗಾಗಿ ನೆರವು ಅವೆಲ್ಲವನ್ನೂ ಪೂರೈಸುವತ್ತ ಸಾಧ್ಯವಾಗಿಸಬೇಕು. ಈ ನಿಟ್ಟಿನಲ್ಲಿ ಸರಕಾರ ತಕ್ಷಣವೇ ಒಂದಷ್ಟು ಕಾರ್ಯ ಮಾಡಬೇಕಿದೆ.
ನನಗನ್ನಿಸುವುದೆಂದರೆ ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿಗಳು ಹೀಗೆ ಮಾಧ್ಯಮಗಳಲ್ಲಿ ನೆರವು ಕೋರುವುದಕ್ಕಿಂತ ಒಂದಷ್ಟು ಮಠಗಳು, ನಿಜವಾಗಲೂ ಸಮಾಜ ಸೇವೆಯಲ್ಲಿರುವಂಥ ಪ್ರಾಮಾಣಿಕ ಸಂಘ ಸಂಸ್ಥೆಗಳ ನೆರವು ಪಡೆಯಬೇಕು. ಕೆಲವರಿಂದ ಒಂದಷ್ಟು ಕೆಲಸ ಮಾಡಿಸುವುದಕ್ಕಿಂತ ಪರಿಸ್ಥಿತಿಯ ನಿರ್ವಹಣೆಗೆ ನೋಡಲ್ ಏಜೆನ್ಸಿಗಳಾಗಿ ಘೋಷಿಸಬೇಕು. ಸದಾ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಆಡಳಿತ ನಿರ್ವಹಣೆಯನ್ನು ನೆನಪಿಸಿಕೊಳ್ಳುವ ಸರಕಾರ, ಈಗ ಕಾರ್ಯೋನ್ಮುಖವಾಗಬೇಕು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಶ್ರೀ ರವಿಶಂಕರ್ ಗುರೂಜಿಯಂಥವರು ನೇತೃತ್ವ ವಹಿಸಿದ್ದ ಸಂಸ್ಥೆಗಳು, ರಾಮಕೃಷ್ಣಾಶ್ರಮ, ಈಗಾಗಲೇ ಇಂಥ ಕಾರ್ಯದಲ್ಲಿ ತೊಡಗಿಕೊಂಡ ಸುತ್ತೂರು, ಸಿದ್ಧಗಂಗಾದಂಥ ಹಲವು ಮಠಗಳು, ಹಾಗೆಯೇ ಕೆಲ ಪ್ರಾಮಾಣಿಕ ಸಂಘ ಸಂಸ್ಥೆಗಳನ್ನು ಬಳಸಿಕೊಳ್ಳಿ. ಒಂದಿಪ್ಪತ್ತು ಸಂಸ್ಥೆಗಳನ್ನು ಗುರುತಿಸಿ ಬದುಕು ಕಟ್ಟುವ ಕೆಲಸವನ್ನು ವಹಿಸಬೇಕು. ಕಾರಣ, ಇವರೆಲ್ಲರೂ ಈಗಾಗಲೇ ಹಲವೆಡೆ ಬದುಕು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ ಜನರಲ್ಲಿ ನಂಬಿಕೆ ಉಳಿಸಿಕೊಂಡವರು. ಇಂಥವರು ಸಹಾಯ ಕೋರಿದರೆ ಯಾರೂ ಇಲ್ಲವೆನ್ನುವುದಿಲ್ಲ. ಕಾರಣ, ತಾವು ಕೊಟ್ಟ ಹಣ ದುರ್ಬಳಕೆಯಾಗುವುದಿಲ್ಲ ಎಂಬ ನಂಬಿಕೆ ಹೆಚ್ಚು ಖುಷಿ ಕೊಡುತ್ತದೆ. ಸರಕಾರ, ಮುಖ್ಯಮಂತ್ರಿ, ಸಚಿವರು ಕೇಳುವುದಕ್ಕಿಂತಲೂ ಮೇಲಿನಂಥ ಸಂಸ್ಥೆಗಳು ಮನವಿ ಮಾಡಿದರೆ ನೆರವು ಮತ್ತಷ್ಟು ಒದಗಬಹುದು. ರಾಜ್ಯದ ಐದು ಕೋಟಿಯಲ್ಲಿ ಎರಡು ಕೋಟಿ ಮಂದಿ ತಲಾ 100 ರೂ. ಕೊಡಿ ಎಂದರೆ ಕೈ ಎತ್ತಿ ಕೊಡುತ್ತಾರೆ. ಈ ಹಣ ಅಲ್ಪವೇನಲ್ಲ, ಕಡಿಮೆ ಎಂದರೂ 200 ಕೋಟಿಗಿಂತಲೂ ಹೆಚ್ಚು ಹಣ. ಸದ್ಯಕ್ಕೆ ಕೇಂದ್ರ ಸರಕಾರ ನೀಡಿರುವ ನೆರವಿಗಿಂತಲೂ ಹೆಚ್ಚು. ಜನರಿಗೆ ಕೊಡಲು ದಾರಿದ್ರ್ಯವಿಲ್ಲ, ನಂಬಿಕೆಯ ಕೊರತೆಯಿದೆ. ಅದನ್ನು ಸರಕಾರ, ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು.
ಸರಕಾರ ಎಲ್ಲ ರೀತಿಯಲ್ಲೂ ಪ್ರವಾಹ ಪೀಡಿತರ ನೆರವಿಗೆ ಬಂದ ಹಣ, ಸಾಮಗ್ರಿ ಎಲ್ಲವನ್ನೂ ಈ ಸಂಸ್ಥೆಗಳಿಗೆ ವಹಿಸಬೇಕು. ಅವುಗಳ ವಿಲೇವಾರಿ ಹೊಣೆಯನ್ನು ಇವರಿಗೇ ವಹಿಸಬೇಕು. ಈ ಏಜೆನ್ಸಿಗಳಾಗಿ ಕಾರ್ಯ ನಿರ್ವಹಿಸುವವರು ಒಂದಷ್ಟು ಮಂದಿ ಸ್ವಯಂ ಸೇವಕರ ಮೂಲಕ ಈ ಕೆಲಸವನ್ನು ಅತ್ಯಂತ ಹರ್ಷದಾಯಕವೆನ್ನುವಂತೆ ಮಾಡುತ್ತವೆ. ಅದರಲ್ಲಿ ಎರಡು ಮಾತಿಲ್ಲ. ಹೀಗೆ ಮಾಡಲಾದ ನೋಡಲ್ ಏಜೆನ್ಸಿಗಳೂ ಸಹ ಸಂತ್ರಸ್ತರ ಅಗತ್ಯಗಳನ್ನು ಗಮನಿಸಿ ಒಂದೊಂದು ಹೊಣೆಯನ್ನು ನಿರ್ವಹಣೆಗೆ ತೆಗೆದುಕೊಳ್ಳಬೇಕು. ಇವರಿಗೆ ಬೆಂಗಾವಲಾಗಿ ಸರಕಾರ ನಿಲ್ಲಬೇಕು. ಇಷ್ಟಾದರೆ ದೊಡ್ಡ ಅಚ್ಚರಿಯೇ ಘಟಿಸುತ್ತದೆ. ಇದು ಇರುವ ವ್ಯವಸ್ಥೆಗೆ ಪರ್ಯಾಯವಲ್ಲ ; ಆ ವ್ಯವಸ್ಥೆಯ ಬಗ್ಗೆಯೇ ಜನರಲ್ಲಿ ಒಂದಷ್ಟು ವಿಶ್ವಾಸ ತುಂಬುವ ಪ್ರಯತ್ನ.
ಉದಾಹರಣೆಗೆ, ಈ ನೋಡಲ್ ಘಟಕಗಳು ಸಂತ್ರಸ್ತರ ಅಗತ್ಯಗಳನ್ನು ಪಟ್ಟಿ ಮಾಡುತ್ತವೆ. ಅವುಗಳನ್ನು ಮಾಧ್ಯಮಗಳಿಗೆ ಮುಟ್ಟಿಸುವತ್ತ, ಜನರಿಗೆ ತಲುಪಿಸುವತ್ತ ಸ್ಥಳೀಯ ಜಿಲ್ಲಾಧಿಕಾರಿಗಳು, ಇತರೆ ಅಧಿಕಾರಿಗಳನ್ನು ಸರಕಾರ ನೇಮಿಸಬೇಕು. ಆಗ ಎಲ್ಲಿಯೂ ನೆರವೆಂಬುದು ವೃಥಾ ವ್ಯರ್ಥವಾಗುವುದಿಲ್ಲ. ನೆರವು ಎಲ್ಲರಿಗೂ ದೊರೆಯುತ್ತದೆ, ಒಂದೇ ಕಡೆ ರಾಶಿ ಬೀಳುವುದಿಲ್ಲ.
ಇದರೊಂದಿಗೆ ಅವರಿಗೆಲ್ಲಾ ಮನೆಯನ್ನು ಕಟ್ಟಿಕೊಡುವ ಕೆಲಸ ಬಂತೆನ್ನಿ. ಆಗ ಸರಕಾರ ತನ್ನ ಇಲಾಖೆಯ ಎಂಜಿನಿಯರುಗಳನ್ನು ಈ ಸಂಸ್ಥೆಗಳ ಸಹಾಯಕ್ಕೆ ಒದಗಿಸಬೇಕು. ಹೀಗೆ ಆರೋಗ್ಯ ನಿರ್ವಹಣೆಗೆ ಸಂಬಂಧಿಸಿಯೂ. ತನ್ನ ಎಲ್ಲ ಇಲಾಖೆಯ ಸಿಬ್ಬಂದಿಗಳನ್ನು ಸಮರ್ಥವಾಗಿ ಬಳಸುವ ಮೂಲಕ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ.
ಮತ್ತೊಂದು. ಎಲ್ಲೆಂದರಲ್ಲಿ ಪ್ರವಾಹ ಪೀಡಿತರಿಗೆ ನಿಧಿ ಸಂಗ್ರಹ ಆರಂಭವಾಗಿದೆ. ಅದಕ್ಕೆ ಲೆಕ್ಕವಿಲ್ಲ, ಜಮವಿಲ್ಲ, ಯಾರು ಯಾರಿಗೆ ಕೊಟ್ಟರು, ಎಷ್ಟು ಸಂಗ್ರಹಿಸಿದರು ? ಯಾವ ಲೆಕ್ಕವೂ ಸಿಗುವುದಿಲ್ಲ. ಹಾಗಾಗಿ ಸರಕಾರ ಹೀಗೆ ಸಂಗ್ರಹಿಸುವ ಪ್ರತಿ ಸಂಸ್ಥೆಗಳನ್ನೂ ಮೇಲಿನ ಘಟಕಗಳಿಗೆ ವಹಿಸಬೇಕು. ಲೆಕ್ಕಪತ್ರ ವಿವರಗಳನ್ನು ಕೋರುವುದು ಅತ್ಯಂತ ಅವಶ್ಯ. ಇಲ್ಲದಿದ್ದರೆ ಮುಂದೊಂದು ದಿನ ಜನ ನೆರವು ಕೊಡುವುದರಲ್ಲೇ ನಂಬಿಕೆ ಕಳೆದುಕೊಂಡಾರು !
ಮಾನ್ಯ ಮುಖ್ಯಮಂತ್ರಿಗಳು ಕೆಲ ತಿಂಗಳ ಹಿಂದೆ ‘ಪಕ್ಷ ಕಟ್ಟಲು ಸಚಿವರಿಂದ ದೇಣಿಗೆ ಕೋರಿದ್ದರು’. ಎಷ್ಟು ಮಂದಿ ತಮ್ಮ ಜೇಬಿಂದ ಕೊಟ್ಟರೋ ಗೊತ್ತಿಲ್ಲ. ಈಗ ಪ್ರತಿ ಸಚಿವರೂ ತಮ್ಮ ಜೇಬಿಂದ ತಲಾ ಒಂದು ಕೋಟಿ ರೂ. ನೆರವು ಕೊಡುವಂತೆ ಕೇಳಿ. ಬಹುತೇಕರು ಕೋಟ್ಯಧೀಶ್ವರರೇ. ಕೋಟ್ಯಧೀಶರಲ್ಲದವರು ತಮ್ಮ ಕೈಲಾದಷ್ಟು ಹಣ ಕೊಡಲಿ. ಅವೆಲ್ಲವನ್ನೂ ಸಂಗ್ರಹಿಸಿ ಬದುಕು ಕಟ್ಟುವ ಕ್ರಿಯೆಗೆ ಬಳಸಿ.
ನಮ್ಮ ಕಣ್ಣೆದುರು ಒಂದು ಬದುಕು ನಾಶವಾಗುತ್ತಿದೆ ಎಂದೆನಿಸಿದರೆ ನಮ್ಮ ಕೈಲಾದವೆಲ್ಲವನ್ನೂ ಮಾಡಿ ಉಳಿಸಬೇಕಂತೆ. ಬರೀ, ಯಾವುದೋ ಒಂದನ್ನು ಮಾಡಿ ಲೆಕ್ಕಾಚಾರ ಮುಗಿಸುವುದಲ್ಲ. ಹಾಗಾಗಿ ಸರಕಾರ, ಇನ್ನು ಮುಂದಾದರೂ ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಮುಂದಾಗಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಬದುಕು ಕಟ್ಟುವ ಕೆಲಸವಾಗಬೇಕು, ಸರಕಾರ ಏನಿದ್ದರೂ ನಿಂತು ನೋಡಬೇಕು, ಉಸ್ತುವಾರಿಯ ಹೊಣೆ ಹೊತ್ತು !
ಇಂಥ ಸಂದರ್ಭದಲ್ಲೂ ತುರ್ತಾಗಿ ವಿವೇಕಯುತ ಆಡಳಿತ, ವಿವೇಚನಾಯಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸರಕಾರ ಸ್ಥಾವರವೇ.